Shravan-Shukravara-Haadu

ಹರನ ಕುಮಾರನ | ಶ್ರಾವಣ ಶುಕ್ರವಾರ ಹಾಡು | ಹರಪನಹಳ್ಳಿ ಭೀಮವ್ವಾ| Harana Kumarana | Shravana Shukravara Haadu | Lyrics

ಶ್ರಾವಣ ಶುಕ್ರವಾರ ಹಾಡಿನ ಬಗ್ಗೆ (About Shravana Shukravara Haadu)

ಶ್ರಾವಣ ಶುಕ್ರವಾರದ ಹಾಡನ್ನು ಸಂಪತ್ತು ಶುಕ್ರವಾರ ಹಾಡು ಎಂತಲೂ ಕರೆಯುತ್ತೇವೆ.
ಹರಪನಹಳ್ಳಿ ಭೀಮವ್ವ ಶ್ರಾವಣ ಶುಕ್ರವಾರದ ಹಾಡನ್ನುರಚಿಸಿದ್ದಾರೆ.
ಪ್ರತೀ ವರ್ಷ ಶ್ರಾವಣ ಮಾಸದಲ್ಲಿ ಬರುವ ಶುಕ್ರವಾರಗಳಂದು ಸುಮಂಗಲಿಯರು ಈ ಹಾಡನ್ನು ಹೇಳುವದು ಮನೆ ಮನೆಯಲ್ಲಿಯ ಸಂಪ್ರದಾಯ.

ಹರಪನಹಳ್ಳಿ ಭೀಮವ್ವ ಶ್ರಾವಣ ಶನಿವಾರದ ಹಾಡನ್ನು ಸಹ ರಚಿಸಿದ್ದಾರೆ

ಶ್ರಾವಣ ಶುಕ್ರವಾರ ಹಾಡು ಲಿರಿಕ್ಸ್ ( Shravana Shukravara Haadu Lyrics In Kannada)

ಹರನ ಕುಮಾರನ ಚರಣಕಮಲಗಳಿಗೆರಗಿ
ಶಾರದೆಗೆ ವಂದಿಸುತ
ಶರಧಿಶಯನಗೆ ಸೆರಗೊಡ್ಡಿ ಬೇಡಿಕೊಂಬೆ
ಶರಧಿಸುತೆಯ ಕಥೆಗೆ ವರವ || 1 ||

ಸಾಕ್ಷಾತ ಶ್ರೀಹರಿ ವಕ್ಷಸ್ಥಳ ವಾಸಿಯೇ
ಇಕ್ಷುಚಾಪದವನ ಪಡೆದ
ಮೋಕ್ಷದಾಯಕಳೇ ಮಾ ಲಕ್ಷುಮಿ ಕರುಣಾ-
ಕಟಾಕ್ಷದಿ ನೋಡಬೇಕೆನ್ನ || 2 ||

ಶ್ರಾವಣಮಾಸದಿ ಮೊದಲ ಶುಕ್ಕುರವಾರ
ಮಾಧವನರಸಿ ಮಾಲಕ್ಷ್ಮೀ ದೇವೇರ
ಮಹಿಮೆ ಕೊಂಡಾಡುವೋದೀ ಕಥೆ
ಕಿವಿಗೊಟ್ಟು ಕೇಳೋದು ಜನರು || 3 ||

ಬಡವ ಬ್ರಾಹ್ಮಣನೊಂದು ಪಟ್ಟಣದೊಳಗಿದ್ದ
ಮಡದಿ ಮಕ್ಕಳ ಸಹಿತಾಗಿ
ಹಿಡಿದು ತಂಬೂರಿ ತಂಬಿಗೆಯ ಗೋಪಾಳಕ್ಕೆ
ಬಿಡದೊಂದು ಮನೆಯ ತಿರುಗುತಲಿ || 4 ||

ಸೊಸೆಯರು ನಾಲ್ಕು ಮಂದಿಯು ಗಂಡುಮಕ್ಕಳೂ
ಹಸುಗೂಸುಗಳು ಮನೆತುಂಬಾ
ಅಶನ ವಸನವಿಲ್ಲ ಹಸಿದ ಮಕ್ಕಳಿಗೆ ಹಾಲು
ಮೊಸರು ಅನ್ನವು ಮೊದಲಿಲ್ಲ || 5 ||

ಅತಿಗುಣವಂತರು ಗತಿಯಿಲ್ಲ ಗ್ರಾಸಕ್ಕೆ
ಮಿತಭೋಜನವ ಮಾಡುವರು
ವ್ರತನೇಮ ನಿಷ್ಠೆ ನಿರುತ ದರಿದ್ರವನು
ಶ್ರೀಪತಿ ಸತಿ ದಯದಿ ನೋಡಿದಳು || 6 ||

ಒಂದು ದಿನದಿ ಬಂದ ಮಂದಿ ಮಂದಿರದಲ್ಲಿ
ಚೆಂದಾದ ಸುಣ್ಣ ಸಾರಣೆಯು
ರಂಗವಲ್ಲಿ ಚಿತ್ರ ಬಣ್ಣಕಾರಣೆ ಮನೆ
ಮುಂದೆ ತೋರಣ ಕಟ್ಟುತಿರಲು || 7 ||

ಮನೆಮನೆಯಲ್ಲಿ ಮಾಲಕ್ಷ್ಮೀದೇವೇರ
ಚಟ್ಟಿಗೆ ಬರೆವುದನು
ತಾ ಕಂಡು ಇದು ಏನು ನೋವಿ
ಎನಗೆ ಹೇಳಬೇಕೆಂದು ಘನಭಕ್ತಿಯಿಂದ ಕೇಳಿದನು || 8 ||

ಕ್ಷೀರಸಾಗರದಲ್ಲಿ ಹುಟ್ಟಿದ ಮಾಲಕ್ಷ್ಮೀ ದೇವಿ
ದೇವರ ಪಟ್ಟದರಸಿ
ಶ್ರಾವಣಮಾಸ ಸಂಪತ್ತು ಶುಕ್ಕುರವಾರ
ನಾವು ಪೂಜೆಯ ಮಾಡಬೇಕು || 9 ||

ಎನಗೊಂದು ಚಟ್ಟೆಗೆ ಬರೆದುಕೊಟ್ಟರೆ ಎನ್ನ
ಮನೆಯಲ್ಲಿ ಇಟ್ಟು ಪೂಜಿಪೆನು
ವಿನಯದಿಂದ ಹೇಳಿಕೊಂಡರೆ ಒಂದು ಚಟ್ಟಿಗೆ
ಬರೆದುಕೊಟ್ಟರು ಬಲಗೈಲಿ || 10 ||

ಸಿರಿದೇವಿ ಚಟ್ಟಿಗೆ ಹಿಡಿದು ಗೋಪಾಳಕ್ಕೆ
ಹೋದನು ಮನೆ ಮನೆಯಲ್ಲಿ
ಗೋಧಿ ಅಕ್ಕಿ ಬ್ಯಾಳಿ ಬೆಲ್ಲ ತುಪ್ಪವ ತಂದು
ನೀಡೋರು ಹಿಡಿ ಹಿಡಿರೆಂದು || 11 ||

ಕ್ಯಾದಿಗೆ ಕುಸುಮ ಮಲ್ಲಿಗೆ ಪತ್ರಫಲಗಳು
ಪೂಜಾ ಸಾಧನ ಪದಾರ್ಥಗಳು
ಆದಿಲಕ್ಷ್ಮಿ ದಯ ಆದ ಕಾರಣದಿಂದ
ಆದರದಿಂದ ಕೊಡುವರು || 12 ||

ತಂದ ಪದಾರ್ಥ ತನ್ನ ಹೆಂಡತಿ ಕರೆದು
ಮುಂದಿಟ್ಟು ವಾರ್ತೆಗಳ ಹೇಳಿದನು
ಇಂದಿರಾದೇವೇರ ಇಂದು ಪೂಜೆಯ ಮಾಡು
ಆನಂದವ ಕೊಡುವಳು ನಮಗೆ || 13 ||

ಕಬ್ಬು ಬಿಲ್ಲು ಹಿಡಿವೋ ಕಾಮನ ಮಾತೆ ಮಾಲಕ್ಷ್ಮೀ
ಉರ್ವಿಯೊಳು ಉತ್ತಮಳೀಕೆ
ಹಬ್ಬದೂಟಕೆ ಹೇಳಿ ಬಂದೆ ಬ್ರಾಹ್ಮಣಗೆ
ಮತ್ತೊಬ್ಬ ಮುತ್ತೈದೆಗೆ ಹೇಳೆಂದ || 14 ||

ಚಿಕ್ಕ ಸೊಸೆ ಎಣ್ಣೆ ಕುಂಕುಮ ಕೈಯಲ್ಲಿ
ತಕ್ಕೊಂಡು ನಡೆದಳು ಹಾದಿಯಲಿ
ಚೊಕ್ಕ ಚಿನ್ನದ ಗೊಂಬೆಯಂಥ ಮುತ್ತೈದೆ ತಾ
ಗಕ್ಕನೆ ಬಂದು ಕೇಳಿದಳು || 15 ||

ಹುಡುಗೀ ನೀ ಎತ್ತ ಪೋಗುವಿಯೇ ನಿಮ್ಮ ಮನೆ ಎಲ್ಲೆ
ಅಡಿಗೆ ಏನೇನು ಮಾಡುವರು
ಹಿಡಿದೆಣ್ಣೆ ಕುಂಕುಮ ಕೊಡುವುದು ಇನ್ಯಾರಿಗೆ
ಕೊಡಬಾರದೇನೆ ನೀ ಎನಗೆ || 16 ||

ದಾರಾದರೇನಮ್ಮ ದಾರಿ ನೋಡದ ಮುಂಚೆ
ನೀನೇ ಬಾ ನಮ್ಮ ಮಂದಿರಕೆ
ಹೇಳಿ ಮುತ್ತೈದೆಗೆ ಹಿಗ್ಗಿಲೆ ಬಂದು ಅತ್ತೆ
ಮಾವನ ಮುಂದೆ ಅರುಹಿದಳು || 17 ||

ಮನೆಯ ಸಾರಿಸಿ ಸುಣ್ಣ ಕಾರಣೆ ರಂಗೋಲಿಯ
ಬರೆದು ಬಾಗಿಲಿಗೆ ಬಣ್ಣವನು
ತಳಿರು ತೋರಣ ಕಟ್ಟಿ ಸರ್ವ ಸಂಭ್ರಮದಿಂದ
ಎರೆದುಕೊಂಡರು ಎಲ್ಲರೂ ಬೇಗ || 18 ||

ಕಮಲ ಕ್ಯಾದಿಗೆ ಕಬ್ಬು ಕದಳಿ ಕಂಬವು
ಬಾಳೆಗೊನೆ ಕಟ್ಟಿ ಚಿತ್ರ ಮಂಟಪವ
ಎಡಬಲದಲ್ಲಿ ನಾಲ್ಕು ನಂದಾದೀವಿಗೆ ಹಚ್ಚಿ
ನಡುವೆ ಹಾಕಿ ಪದ್ಮ ಪೀಠಗಳ || 19 ||

ಚಟ್ಟಿಗೆಯೊಳಗೆ ಅಕ್ಕಿ ಐದು ಫಲವ ತುಂಬಿ
ಮುತ್ತೈದೆಯರೆಲ್ಲಾ ನೆರೆದು ಕಟ್ಟಿದರು
ಕೊರಳ ಮಾಂಗಲ್ಯ ಮಾಲಕ್ಷ್ಮೀ ಪ್ರತಿಷ್ಠೆ
ಮಾಡಿದರು ಸಂಭ್ರಮದಿ || 20 ||

ಅರಿಷಿಣ ಕುಂಕುಮ ಗಂಧ ಬುಕ್ಕಿಟ್ಟು
ಗೆಜ್ಜೆವಸ್ತ್ರವು ಪಾರಿಜಾತ ಸಂಪಿಗೆಯು
ಮುಡಿಸಿ ಮಲ್ಲಿಗೆ ದಂಡೆ ಒಡೆಸಿ ತೆಂಗಿನಕಾಯಿ
ಉಡಿ ತುಂಬಿ ಉತ್ತತ್ತಿ ಫಲಗಳು || 21 ||

ಭಕ್ಷ್ಯ ಶ್ಯಾವಿಗೆ ಪರಮಾನ್ನ ಚಿತ್ರಾನ್ನ ಸಣ್ಣಕ್ಕಿ
ಶಾಲ್ಯಾನ್ನ ಸೂಪಗಳು
ಚಕ್ಕುಲಿ ಗಿಲಗಂಜಿ ಚೆಂದ ಚಿರೋಟಿ
ಹಪ್ಪಳ ಸಂಡಿಗೆ ಆಂಬೋಡೆಗಳು || 22 ||

ಸಕ್ಕರೆ ಘೃತ ಕ್ಷೀರ ಸಕಲ ಪಕ್ವಾನ್ನ
ಮಂಡಿಗೆ ಬೀಸೋರಿಗೆ ಗುಳ್ಳೋರಿಗೆಯು
ಚಂದ್ರನಂತೆ ಹೊಳೆವ ಶ್ಯಾವಿಗೆಯ ಫೇಣಿಯು
ದಿವ್ಯ ಬುಂದ್ಯ ಬುರುಬುರಿ ಅನಾರಸವು || 23 ||

ಬೇಕಾದ ಬೇಸನ್ನು ಬಿಳಿಯಾದ ಅರಳಿನುಂಡೆ
ಮೋತಿಚೂರು ಚೂರ್ಮಲಾಡು
ಸೇತು ಬಿಳುಪಿನ ಚಕ್ರದಂಥ ಜಿಲೇಬಿ
ಸುಕಿಯದುಂಡೆ ಮುಖವಿಲಾಸಗಳು || 24 ||

ಹೋಳಿಗೆ ಎಣ್ಣೋರಿಗೆ ಹೊಯ್ಗಡವು ಗೇಹೂರಿ ಕಾಯಿಹಾಲು
ಕರಿದ ಹೂರಣ ಕಡುಬು
ತೇಂತೋಳಿ ತಿರುವಿದ ಉದ್ದಿನಬೇಳೆ ಮೆಣಸು ಜೀರಿಗೆ
ಇಂಗು ಹಾಕಿದ ಉಪ್ಪಿನ ಕಡುಬು || 25 ||

ಸಾರು ಸಾಂಬಾರ ಪಡುವಲಕಾಯಿ ಪಳದ್ಯ ಉಪ್ಪೇರಿ
ಉಪ್ಪಿನಕಾಯಿರಸವು
ಖೀರು ಮಾಲತಿ ಗೌಲಿ ಪರಡಿ ಪರಮಾನ್ನ
ಮುಕ್ ಸೌರಿ ಚಟ್ಟಣಿ ಕೋಸಂಬರಿಯು || 26 ||

ಹಾಗಲವು ಹೀರೆ ಸೌತೆ ಹಂದರದ ಅವರೆ ಚೌಳಿ
ಬಾಳೆ ಬೆಂಡೆ ಕುಂಬಳವು
ಮಾಗಿದ ಹಲಸಿನ ಕಾಯಿ ಕಲಸಿ ಮೇಲೋಗರ
ಗೆಣಸು ಗುಳ್ಳದಕಾಯಿ ಬಜ್ಜಿಗಳು || 27 ||

ಸಬ್ಜಿಭಾತು ಸೌತೆಭಾತು ಕೇಸರೀ ಭಾತು
ಕೆನೆಕೆನೆ ಮೊಸರು ಒಗ್ಗರಣೆ
ಹಸಿ ಅಲ್ಲ ಬಿಸಿ ಹಾಲು ಹೊಸಬೆಣ್ಣೆ ಇಂಗುಪ್ಪು
ಕಲಸಿ ಬಕಾಳ ಭಾತುಗಳು || 28 ||

ಮುದ್ದು ಮಾಲಕ್ಷ್ಮೀ ನೈವೇದ್ಯ ಮಾಡಿದರು
ಅನಿರುದ್ಧ ಮೂರುತಿ ಸಹಿತಾಗಿ
ಶುದ್ಧ ಸುಣ್ಣವು ಎಲೆ ಅಡಿಕೆ ಏಲಕ್ಕಿ
ಪತ್ತರಿ ಕಾಯಿ ಕಾಚು ಲವಂಗ || 29 ||

ಹಚ್ಚಿಕೊಂಡರು ಎಲ್ಲ ಅರಿಷಿಣ ಗಂಧ ಕುಂಕುಮ
ಎತ್ತಿ ಚಾಮರವ ಬೀಸುವರು
ಅಚ್ಯುತನ ಅರಸಿ ಅನುಗ್ರಹದಿ ನೋಡಿದಳು
ಮೆಚ್ಚಿ ಮುಚ್ಚಿದ ಕಣ್ಣ ತೆಗೆದು || 30 ||

ಅಮರಾದಿ ಸುರರ ಒಡೆಯನ ರಾಣಿ ಲಕ್ಷ್ಮಿಗೆ
ಸರ್ವವ ಸಮರ್ಪಣ ಮಾಡಿ
ನಮೋ ನಮೋ ಎಂದು ಕೈಮುಗಿದು ಮಂತ್ರಾಕ್ಷತೆ
ಶಿರದಲ್ಲಿ ಹಾಕಿ ವರವ ಬೇಡುವರು || 31 ||

ಹಾಡುತ ಪಾಡುತ ಮಾಡುತಲಾರತಿ
ಬೇಡುತ ಮುಡಿದ ಮಲ್ಲಿಗೆಯ
ನೋಡುತ ನಲಿನಲಿದಾಡುತ ತಾ
ದಯಮಾಡುತ ಕೊಟ್ಟಳು ವರವ || 32 ||

ಹೊತ್ತು ಬಹಳವಾಯ್ತು ಮುತ್ತೈದೆ ಬರಲಿಲ್ಲ
ಮತ್ತೇನು ಇದಕೆ ಉಪಾಯ
ಅಷ್ಟು ಅಡಿಗೆ ಎಲೆ ಬಡಿಸಿ ಕುಂಕುಮ ವೀಳ್ಯವಿಟ್ಟು
ಪುಟ್ಟಿಯನು ಮುಚ್ಚಿದರು || 33 ||

ಗಂಡ ಹೆಂಡಿರು ಬಂದ ಬ್ರಾಹ್ಮಣರೊಡಗೂಡಿ
ಉಂಡು ವೀಳ್ಯವನೆ ತಕ್ಕೊಂಡು
ಇಂದು ನಮಗೆ ಜಯಶುಭಕಾಲ ಬಂದಿತೀಗ
ಎಂದು ಆನಂದ ಹೊಂದಿದರು || 34 ||

ಮರುದಿನ ಸಂಪತ್ತು ಶನಿವಾರ ಹಿಟ್ಟಿನ ಕಡುಬು
ಅಂಬಲಿ ಪರಮಾನ್ನ ತಿಳಿ ತಿಳಿದೆಣ್ಣೆ
ಹಿಂಡಿಯ ಪಲ್ಯ
ಗೌರೀಪೂಜೆಯ ಮಾಡಿ ಇಟ್ಟರು ನೈವೇದ್ಯವನು || 35 ||

ಎರಡನೇ ಶುಕ್ಕುರುವಾರ ಮುತ್ತೈದೆಗೆ
ಧೃಢವಾಗಿ ಹೇಳಿ ಬಾರೆನಲು
ಎಡಗೈಯ ಮುಚ್ಚಿಕೊಂಡು ಎಣ್ಣೆ ಕುಂಕುಮವನು
ನಡೆದಳು ಆಗ ಇನ್ನೊಬ್ಬ ಸೊಸೆಯು || 36 ||

ಬಾಜಾರ ಬಿಟ್ಟು ಬದಲು ಮಾರ್ಗ ಹಿಡಿಯಲು
ಹಾದಿಗೆ ಬಂದು ಅಡ್ಡಗಟ್ಟಿ
ಆದಿ ಶುಕ್ಕುರುವಾರ ಹೇಳಿ ಎನ್ನನ್ನು ಬಿಟ್ಟು
ನೀ ದಾರಿಗೆ ಹೇಳುವಿಯೇ ಭೋಜನಕೆ || 37 ||

ನಮ್ಮ ಗೊಡವೆ ಯಾತಕಮ್ಮ ನಿನಗೆ ಸುಮ್ಮನೆ ಹೋಗು
ಶುಕ್ಕುರುವಾರದಲಿ ನಿನ್ನ
ಎಲೆಯ ಬಡಿಸಿಟ್ಟಿದ್ದು ಇಂದಿಗೆ ಅದೆ
ಉಣಬೇಕಾದರೆ ಹೋಗಮ್ಮ || 38 ||

ತಂಗಳೂಟವನು ಉಂಬೋ ಕಂಗಾಲಿ ನಾನಲ್ಲ
ಬಂಗಾರದಂಥ ಮುತ್ತೈದೆ
ತಿಂಗಳಾಗಲಿ ಹಂಗುನೂಲು ಕಟ್ಟಿ ನಿನ್ನೆಲೆ
ತಂಗಳು ನಿನಗೆ ಉಣಿಸುವೆನು || 39 ||

ಬಡಿವಾರ ಮಾತು ಯಾಕೆ ಬಡಸಿಟ್ಟ ಎಲೆ ಉಂಬೋ
ಬಡವಿ ಅಲ್ಲ ನಾ ಭಾಗ್ಯವಂತೆ
ತಡೆಯದೆ ಬರುವೆನು ತಾ ಎಣ್ಣೆ ಕುಂಕುಮ
ಹಿಡಿದೆಳಕೊಂಡು ನಡೆದಳು || 40 ||

ಕೊಟ್ಟೆಣ್ಣೆ ಕುಂಕುಮ ತಟ್ಟನೆ ಬಂದಳು
ಅಷ್ಟು ವಾರ್ತೆಗಳ ಹೇಳಿದಳು
ದಿಟ್ಟ ಮುತ್ತೈದೆ ದೇಶದ ಮ್ಯಾಲೆ ಕಾಣೆನೆಂದು
ಎಷ್ಟು ಹೇಳಲಿ ಆಕೆಯ ಚೆಲ್ವಿಕೆಯ || 41 ||

ಅಡಿಗೆಯಾದವು ಗೌರೀಪೂಜೆಗಳಾದವು
ಬಡಿದವು ಮೂರು ಗಂಟೆಗಳು
ಉಡಿ ಕುಂಕುಮ ಅರಿಷಿಣ ಬಡಿಸಿಟ್ಟರು ಒಂದೆಲೆ
ಸಡಗರದಿಂದ ಉಂಡರಾಗ || 42 ||

ಮೂರನೇವಾರ ಮುತ್ತೈದೆಗೆ ಹೇಳುವರು
ಮತ್ತ್ಯಾರೆಂದು ವಿಚಾರ ಮಾಡುವರು
ಮಾವನವರೆ ಎನ್ನ ಮಾತು ನೋಡಿರಿ ಎಂದು ತಾ
ಹೋದಳು ಇನ್ನೊಬ್ಬ ಸೊಸೆಯು || 43 ||

ಮುಡಿಬಾಗಿ ಮುಚ್ಚಿ ಕೊಂಡೆಣ್ಣೆ ಕುಂಕುಮವನ್ನು
ಹಿಡಿದಳೂ ಇನ್ನೊಂದು ಓಣಿಯನು
ಬಡ ಬಡ ಬಂದು ಹಿಡಿದೆಣ್ಣೆ ಕುಂಕುಮ
ಕೊಡುವುದು ಇನ್ಯಾರಿಗೆ ಔತಣವ || 44 ||

ಔತಣವಲ್ಲಮ್ಮ ಅತಿ ಬಡವರು ನಾವು
ಗತಿಯಿಲ್ಲ ಗೌರಿ ಹಬ್ಬಕ್ಕೆ
ಸುತರು ಆಡ ಹೋಗ್ಯಾರ ಹುಡುಕುತಾ ಬಂದೆ
ಬಿಡು ದಾರಿ ಈ ಪರಿ ಬಯ್ಯುವರು ಎನ್ನ ಮನೆಯಲಿ || 45 ||

ಉಗುಲುತಗಲಿನ ಮಾತಿನ ಬಗೆಯ ನಾ ಬಲ್ಲೆನೆ
ಹಗರಣಗಿತ್ತಿ ನೀ ಹೌದೆ
ಮೊದಲ ಶುಕ್ಕುರುವಾರ ಹೇಳಿ ಎನ್ನನು ಬಿಟ್ಟು
ಬದಲು ಮುತ್ತೈದೆಗೆ ಹೇಳುವರೆ || 46 ||

ಎರಡು ವಾರ ಔತಣ ಬುರುಡಿ ಊಟಾಯಿತು
ಬರಡು ಎಮ್ಮೆ ಹೈನ ಉಂಡಂತೆ
ಕಡಲೆ ಹೂರಣ ಕಡುಬು ಕಟದಬೆಣ್ಣೆ
ಕಾಸಿ ತುಪ್ಪವ ಬಡಿಸು ಎನಗೆ || 47 ||

ಮೆಚ್ಚಿ ಕೊಂಡು ಆಕೆ ಮಾತಿಗೆ ಮರುಳಾದಳೂ
ಹಚ್ಚಿ ಕುಂಕುಮ ಎಣ್ಣೆ ಕೊಟ್ಟು
ನಿಶ್ಚಯವೇನಮ್ಮಾ ನೀ ಬರುವುದು ಎಂದರೆ
ಈ ಕ್ಷಣ ಬರುವೆನು ಹೋಗೆಂದಳು || 48 ||

ಬಂದು ಹೇಳಿದಳಾಕೆ ಚೆಂದ ಚೆಲ್ವಿಕೆ ಮಾತು
ಒಂದೊಂದು ಮಾಡಿ ವರ್ಣಿಸುತಾ
ಇಂದಾಕೆ ಮನಕೆ ಬಂದಂತೆ ಅಡಿಗೆ
ಮಾಡೋಣೆಂದು ಸಂತೋಷ ಪಡುವರು || 49 ||

ಕಡಲೆ ಹೂರಣ ಗಸಗಸೆ ಕೊಬ್ಬರಿ ಏಲಕ್ಕಿ
ಪುಡಿ ದ್ರಾಕ್ಷಿ ಉತ್ತತ್ತಿ ಹಳಕು
ಕಲಸಿ ಕಲ್ಲುಸಕ್ಕರೆ ಕರಿಗಡುಬು ಬೆಣ್ಣೆ ಕಾಸೀ
ತುಪ್ಪವು ಸೋಸಿಲಿಂದ || 50 ||

ಸಿರಿದೇವಿ ಪೂಜೆ ನೈವೇದ್ಯಗಳಾದವು
ಹೊರಗೆ ಹತ್ತು ತಾಸು ಮೀದವು
ಬರಲಿಲ್ಲ ಮುತ್ತೈದೆ ಎಂದು ಎಲೆ ಬಡಿಸಿಟ್ಟು
ಸರ್ವರೂ :ಊಟವನು ಮಾಡಿದರು || 51 ||

ಹುಟಿದ ಮ್ಯಾಲೆ ಇಂಥ ಕಡುಬು ಕಂಡಿದ್ದಿಲ್ಲ
ನಮ್ಮ ಹೊಟ್ಟೆಗೆ ಉಂಡವರು ನಾವಲ್ಲ
ಮುತ್ತೈದೆ ಪುಣ್ಯದಿಂದ ಈ ಊಟ ದೊರಕಿತು
ಎಂದು ಅಷ್ಟರೂ ನಗುತ ನುಡಿದರು || 52 ||

ನಾಲ್ಕನೇವಾರ ನಾ ಹೇಳಿ ಬರುವೆನೆಂದು
ಆಕೆ ಹೋದಳು ಹಿರಿಮಗನ ಅರಸಿ
ಬೇಕಾದವರು ಬಂದು ಹಾಕ್ಯಾಡಲಿ ಎನ ಕೂಡ
ಯಾಕೆ ಎನಗೆ ಒಬ್ಬರ ಭಿಡೆಯ || 53 ||

ದೊಡ್ಡ ಅಗಸೆಯ ಬಿಟ್ಟು ದಿಡ್ಡಿ ಬಾಗಿಲ ಮುಂದೆ
ಸದ್ದು ಮಾಡದೆ ಬರುತಿರಲು
ವಜ್ರದ ಗೊಂಬೆಯಂತೆ ಹೊಳೆವೋ ಮುತ್ತೈದೆ
ನಿಂತಿದ್ದಳಾಗ ಎದುರಿಗೆ ಬಂದು || 54 ||

ಸರ್ವರೊಳಗೆ ಹಿರಿಸೊಸಿಯು ನಾ ಎಂಬಂಥ
ಗರ್ವ ಅಹಂಕಾರದಿ ನೀನು
ಸರಿಯಾಗಿ ಮೂರುವಾರ ಹೇಳಿ ಬಿಟ್ಟು ಎನ್ನ
ಕರೆಯದೆ ಉಂಬುವ ಕಾರಣ ಏನೆ || 55 ||

ಕರಿಲಿಕ್ಕೆ ಬರಲಿಕ್ಕೆ ಕಾಣೆ ನಿಮ್ಮ ಮನೆ ನಾನು
ತಿರುಗೂವಿ ನಾರದರಂತೆ
ಇರುವ ಮಂದಿರವ ತೋರಿದರೆ ಈಗ ನಾ ಬಂದು
ಕರೆದುಣಿಸುವೆನು ನಿಮ್ಮನ್ನು || 56 ||

ದೂರುಂಟು ನಮ್ಮ ಮನೆ ದಾರಿ ಅಸಾಧ್ಯವು
ನೋಡಿ ಬಂದವರು ದಾರಿಲ್ಲ
ಆಹಾರ ನಿದ್ರೆ ಸಂಸಾರ ಸಮುದ್ರವ
ಮೀರಿದವರಿಗೆ ಕಾಂಬುವುದು || 57 ||

ಮಧ್ಯಾಹ್ನದ ಹೊತ್ತಿಗೆ ಸಿದ್ಧಾಗಿ ಬರುವೆನು
ಭದ್ರವಾಗಿ ವಚನ ಕೊಡುವೆನು
ಶುಭವಾದಂಥ ಕೊಬ್ಬರಿ ಭಾರೀ ಬಟ್ಟಲು
ತರಿಸಿ ಹುರಿಗಡಲೆ ತುಂಬು ಉಡಿಯ || 58 ||

ಆಗರದೊಳಗಿನ ಅರಗಿಣಿ ಮರನೇರಿ
ಮಾಗಿದ ಫಲವ ಮೆದ್ದಂತೆ
ಬ್ಯಾಗ ಬಂದು ಈಗ ನಿಮ್ಮನೆಯಲ್ಲಿ ಊಟವನುಂಡು
ತೇಗುತ ತೃಪ್ತ್ಯಾಗಿ ಬರುವೆ || 59 ||

ಮಾಯಾದೇವಿಯ ಮಾಯಾ ಮಾತಿಗೆ ಮರುಳಾಗಿ
ತಾ ಕೊಟ್ಟೆಳೆಣ್ಣೆ ಕುಂಕುಮವ
ನಾ ಹೋದ ಕಾರ್ಯ ಕಾಯಿ ಆಗೋದೇ ಹಣ್ಣೆಂದು
ಹೇಳಿಕೊಂಡಳು ಹೇಳಿ ಕೊಂಡಳು ಶಿಫಾರಸ್ಸು || 60 ||

ವರಗೌರಿ ಪೂಜೆ ನೈವೇದ್ಯಗಳಾದವು
ಹೊರಗೆ ಆರು ಗಂಟೆ ಬಡಿದವು
ಬರಿಯ ಭರಾಸು ಮಾತಿನ ಜಾಣೆ ಮುತ್ತೈದೆ
ಬರಲಿಲ್ಲವೆಂದು ನುಡಿದರು || 61 ||

ಮತ್ತೊಂದು ಎಲೆ ಬಡಿಸಿಟ್ಟು ಮೃಷ್ಟಾನ್ನಗಳ ಅಷ್ಟರೂ
ಊಟವನು ಮಾಡಿದರು
ಕರ್ಪೂರದ ಅಡಿಕೆ ವೀಳ್ಯಗಳ ತಕ್ಕೊಂಡರು
ಅತ್ಯಂತ ಹರುಷದಿಂದ ಇರುವರು || 62 ||

ಬಂದಿತೀಗ ಐದನೇವಾರ ಮುತ್ತೈದೆಗೆ
ಇಂದು ನೀ ಹೇಳಿಬಾರೆನುತಾ
ಹೆಂಡತಿ ಕರೆದು ಹೇಳಿದ ಕುಂಕುಮ ಎಣ್ಣೆ
ತಕ್ಕೊಂಡು ತಾ ನಡೆದಳು ಬ್ಯಾಗ || 63 ||

ಬೀದಿ ಬಿಟ್ಟು ಬದಲು ಹಾದಿಗೆ ಬಂದಳಾ
ಹಾದಿಗೆ ಬಂದು ಅಡ್ಡಗಟ್ಟಿ
ನೀ ದಯ ಮಾಡಿ ಬಂದೆ ಎನಗೆ ಔತಣವ
ಆದರದಿಂದ ಹೇಳುವುದಕೆ || 64 ||

ಜಪ್ಪಿಸಿಕೊಂಡು ಔತಣವ ತಕ್ಕೊಂಡು ನೀ
ತಪ್ಪಿಸಿಕೊಂಡು ಹೋಗುತಿರೆ
ಒಪ್ಪತ್ತಾದರೂ ಊಟ ಮಾಡದವರ ಮಾತಿಗೆ
ಒಪ್ಪಿಕೊಂಬುವುದು ಹ್ಯಾಗೆ ಹೇಳಮ್ಮಾ || 65 ||

ಬಂದ ಔತಣ ಗಂಡ ಮಕ್ಕಳು ಭಾಗ್ಯ
ಒಲ್ಲೆ ಎಂಬುವರು ಉಂಟೆ ಲೋಕದಲಿ
ಕಂಡಲ್ಲಿ ಔತಣ ಹೇಳಿ ಕರೆಯದೆ ಇರುವುದೇನು
ಚೆಂದವೇ ನಿಮ್ಮ ನಡತೆ || 66 ||

ಲಕ್ಷಣವಂತೆ ನಾ ಎದುರಿಗೆ ಬಂದರೆ
ಲಕ್ಷಣ ಶುಭ ಶಕುನಗಳು
ಇಕ್ಷು ಮ್ಯಾಲೆ ಜೇನು ಇಟ್ಟಂತೆ ಬಂದು ಈಗ
ಲಕ್ಷ್ಮೀ ಸರಿಗೆ ನಾ ಕೂಡುವೆನು || 67 ||

ಅವಕಾಶ ಕೊಡುವೆನು ಸಾವಕಾಶ ಅಡಿಗೆ ಮಾಡು
ದಿವಾಕರ ಮುಣುಗೋ ಕಾಲದಲಿ
ದನಕರು ಬರುವೋ ವ್ಯಾಳ್ಯಕ್ಕೆ ನಾ ಬರುವೆನು
ಮನಕೆ ಸಂದೇಹ ಬ್ಯಾಡಮ್ಮಾ || 68 ||

ಅಂಗಳ ಸಾರಿಸಿ ರಂಗು ಕಾರಣೆ ಕೊಟ್ಟು
ರಂಗವಲ್ಲಿಯ ಚಿತ್ರ ಬರೆದು
ಅಂಬರೂದಿನ ಕಡ್ಡಿ ಅರಮನೆ ಬಾಗಿಲ
ಮುಂದೆ ಒಂದು ಹಚ್ಚಿಡಿಸು ಹಿಲಾಲು || 69 ||

ಮಡಿಪೀತಾಂಬರವುಟ್ಟು ಮಡಿಸೀರೆಯನು ಬಿಟ್ಟು
ಕಡಗ ಕಂಕಣ ಕೈಯಲ್ಲಿಟ್ಟು
ಧೃಢವಾದ ಮುಕುರ ಒಂದಡ್ಡಿಕೆ ಬುಗುಡಿ
ಬಾವುಲಿ ಹೊಳೆಯುತಲಿ || 70 ||

ಕಂಚು ಕಳಶ ಕದಲಾರತಿ ತಕ್ಕೊಂಡು
ಮುಂಚೆ ಬಂದು ಎದುರುಗೊಂಡರೆ ಎನ್ನ
ಮಿಂಚಿನಂತೆ ಹೊಳೆವೋ ಚಿನ್ನದ ಹಲಗೆಯ ತೂಗೋ
ಮಂಚದಿ ಬಂದು ಕೂಡುವೆನು || 71 ||

ಅರಮನೆಯಲ್ಲಿ ನಾವಿರುವೋ ಮೂರಂಕಣ ಮನೆ ಮುಂದೆ
ಮುರುಕು ಚಪ್ಪರವು
ಮರದ ಮಣೆಯು ನಮ್ಮಲ್ಲಿರುವೋದು ಚಿನ್ನದ ಹಲಗೆ
ಮಂಚ ಎಲ್ಲಿ ತರುವೋಣ || 72 ||

ಮಡಿಸೀರೆ ಬಿಟ್ಟರೆ ಇನ್ನೊಂದು ಕೋರಿಗಳಿಲ್ಲ
ಮಡಿ ಪೀತಾಂಬರ ನಾ ಕಂಡಿಲ್ಲ
ಹರಡಿ ಕಂಕಣವೆಲ್ಲೆ ಕರಿಯ ಕಾಜಿನ ಬಳೆ
ಇರಲಮ್ಮ ನಿಮ್ಮ ದಯ ನಮಗೆ || 73 ||

ಬಂಗಾರದ ಬಾಳೆಲಿ ಬೆಳ್ಳಿ ಬಟ್ಟಲು
ಮಂಡಿಗೆ ಹಾಲು ತುಪ್ಪಗಳು
ಉಂಡು ಕೂಡುವೆನು ಕುಂದಣ ಕೆತ್ತಿದ ತಬಕಿನಲಿ
ತಂದು ನೀಡೆನಗೆ ತಾಂಬೂಲ || 74 ||

ಹುಟ್ಟಿದ ಮೇಲೆ ಈ ಬೆಟ್ಟಿಲಿ ಎಲೆಯ ಸುಣ್ಣ ಹಚ್ಚಿ
ಹಾಕಿಕೊಂಡು ನಾನರಿಯೆ
ಕರ್ಪೂರದ ಅಡಿಕೆ ಮುತ್ತಿನ ಸುಣ್ಣ ಎಳೆ ಎಲೆಗೆ ಹಚ್ಚಿ
ನೀ ಮಡಚಿ ಕೊಡು ಎನಗೆ || 75 ||

ಬಂಗಾರ ಎಂಬುದು ನಮ್ಮ ಕಂಗಳು ಕಂಡಿಲ್ಲ
ಮಂಗಳ ಸೂತ್ರದ ಒಂದು ಹೊರತು
ಕುಂದಣ ತಬಕು ಎಲ್ಲಿ ಒಡಕೊಂದು ಹಿತ್ತಾಳೆ
ತುಂಡಾದ ತಾಟೊಂದು ಇರುವುದು || 76 ||

ಬುಟ್ಟದಾರಿ ಬುಗುಡಿ ಅಂಚು ಜರತಾರಿ
ಅಚ್ಚು ಚಿನ್ನದ ಥಳಕಿರವೋ
ಕುಪ್ಪುಸ ಹೊಲಿಸಿಕೊಟ್ಟರೆ ಒಂದರೆ ಕ್ಷಣ
ತೊಟ್ಟು ನಿನಗೆ ಕೊಟ್ಟು ಬರುವೆ || 77 ||

ಹುಟ್ಟಾ ಬಡವರು ನಾವು ಅಷ್ಟದರಿದ್ರರು
ನಿತ್ಯ ಯಾತ್ರೆಯಲಿ ಬದುಕುವರು
ಚಿತ್ತಕ್ಕೆ ತಂದು ನೀವು ದಯಮಾಡಿ ಬರುವೋದು
ಎಂದು ಹಸ್ತವ ಮುಗಿದು ಹೇಳಿದಳು || 78 ||

ಕಡೆಯ ವಾರವು ಕಾಮಧೇನುವಿನಂತೆ ಬರುವೆನು
ಪಡೆದುಕೋ ಮನದ ಇಷ್ಟಾರ್ಥ
ನಡೆದು ಬರುವೆ ನಾಲ್ಕುವಾರದ ದಕ್ಷಿಣಿ
ಕೊಡು ನಾ ಬಿಡುವವಳಲ್ಲ || 79 ||

ಒಂದೊಂದು ಮಾತನಾಡವಳು ಮುತ್ತೈದೆ
ಬಾಯಿಂದ ಮುತ್ತು ಉದುರುವಂದದಲಿ
ಆನಂದದಿಂದ ಹಚ್ಚಿ ಕುಂಕುಮ ಎಣ್ಣೆ ಕೋಟ್ಟಾಗ
ಬಂದಳು ತನ್ನ ಮಂದಿರಕೆ || 80 ||

ಸಾಧ್ಯವಲ್ಲವು ಭಾಳ ಅಸಾಧ್ಯ ಮುತ್ತೈದೆ
ನಿಂತಿದ್ದಳು ಎನ್ನ ಎದುರಿಗೆ ಬಂದು
ನಿದ್ರೆಯೋ ಕನಸೋ ಎಚ್ಚರಿದ್ದಿಲ್ಲ ಎನಗೊಂದು
ನಿರ್ಧಾರವಾಗಿ ತಿಳಿಯದು || 81 ||

ಗತ್ತಿನ ಮಾತು ಚಮತ್ತು ಚಾತುರ್ಯ
ಸಂಪತ್ತಿನ ಸೌಭಾಗ್ಯವಂತೆ
ಎಷ್ಟು ಹೇಳಲಿ ಆಕೆ ಚೆಲ್ವಿಕೆ ಚೆಂದ
ಸಾಕ್ಷಾತ ವಿಷ್ಣುವನ್ನಾದರೂ ಮೋಹಿಸುವಳು || 82 ||

ನಮ್ಮ ಪುಣ್ಯದ ಫಲ ಒದಗಿ ಬಂದಿದ್ದರೆ
ಮನ್ನಿಸಿ ಮನೆಗೆ ಬರುವಳು
ಇನ್ನೇನು ಮಾಡೋಣ ಇದಕೆ ಎಂದು ಆಲೋಚಿಸಿ
ಇನ್ನೊಬ್ಬ ಮುತ್ತೈದೆಗೆ ಹೇಳಿದರು || 83 ||

ಪಾಲು ಸಕ್ಕರೆ ಪಂಚಭಕ್ಷ್ಯ ಪರಮಾನ್ನವು
ಸಾರು ಶಾಕಗಳು ಶಾಲ್ಯಾನ್ನ
ಮಾಲಕ್ಷ್ಮೀ ಪೂಜೆ ನೈವೇದ್ಯ ಮಾಡಿ
ಮಂಗಳಾರತಿ ಬೆಳಗುವರು || 84 ||

ಪಕ್ಷಿವಾಹನ ಪುರುಷೋತ್ತಮನಾದ ಅಧೋಕ್ಷಜ
ಆ ಪರಮಾತ್ಮ ನ ಅಕ್ಷದ ಸುತ
ಅಡಗುವ ಕಾಲವನ್ನು
ನಿರೀಕ್ಷಿಸಿ ನೋಡುತಿಹರು || 85 ||

ಅತ್ತ ಮಾಲಕ್ಷ್ಮೀ ತಾ ಪಚ್ಚಕರ್ಪೂರ ಪುನುಗಿನ
ಎಣ್ಣೆ ಸಂಪಿಗೆ ತೈಲ
ಕಸ್ತೂರಿ ಬೆರೆಸಿದ ಬಿಸಿನೀರು ಅರಿಷಿಣ
ಹಚ್ಚಿ ತಾ ಎರಕೊಂಡಳಾಗ || 86 ||

ಸುಳಿಗುರುಳು ಹಿಕ್ಕೆ ಬೈತಲೆ ತಿದ್ದಿ ತಳಪು ಹಾಕಿ
ಚೌರಿ ರಾಗಟೆ ಚಂದ್ರ ಗೊಂಡ್ಯ
ಗಿಳಿಗಿಜ್ಜೆ ಹೆರಳು ಬಂಗಾರ ಕ್ಯಾದಿಗೆ ಮ್ಯಾಲೆ
ಅರಳು ಮಲ್ಲಿಗೆ ಮಾಲೆ ಮುಡಿದು || 87 ||

ಬಿಚ್ಚಿ ನಾನುಟ್ಟಳು ಬಿಳಿಯ ಪೀತಾಂಬರ
ಅಚ್ಚ ಜರದ ಸೆರಗ ಹೊದ್ದು
ಕುತ್ತಣಿ ಕುಬುಸ ಮುತ್ತಿನ ಗೊಂಡ್ಯ ತೋಳಿಗೆ
ಕಟ್ಟುತಿದ್ದಳು ಬಾಜು ಬಂದು || 88 ||

ವಜ್ರದ ವಂಕಿಯು ನಾಗಮುರಿಗೆ ನಾಗಡ್ಡಿಕೆ
ಗೆಜ್ಜಡ್ಡಿಕೆಯು ಕೊರಳಲ್ಲಿ
ದೊಡ್ಡ ಸರಿಗೆ ಮ್ಯಾಲೆ ಅಡ್ಡಿಕೆ ಮುತ್ತಿನ ಕೆಂಪು
ಥಳಕು ಜಳಕು ಹೊಳೆಯುತಲಿ || 89 ||

ಪುತ್ಥಳಿಸರ ಏಕಾವಳಿ ಚಂದ್ರಹಾರ
ಕಟ್ಟಿದಳಾಗ ಕಂಠಿ ಕಟ್ಟಾಣಿ
ಪಚ್ಚ ಮಾಣಿಕ ರತ್ನಪದಕ ನಿರಿಗಳಲಿ
ಜತ್ತಾಗಿ ನಲಿದಾಡುತಿರಲು || 90 ||

ಪರಡಿ ಕಂಕಣ ಹಸ್ತಕಡಗ ಕಮಲದ್ವಾರ್ಯ
ನಡುವಿಗೆ ನವರತ್ನ ಪಚ್ಚೆ
ಬಿಡಿಮುತ್ತು ಬಿಗಿದ ವಜ್ರದ ವಾಲೆ ಬುಗುಡಿ
ಚಂದ್ರಮುರುವು ಮುತ್ತಿನ ಸರಪಳಿಯು || 91 ||

ಸಾಲುಕುಂದಣದ ಆಣಿ ಮುತ್ತಿನ ಮುಕುರ್ಯ
ಬುಲಾಕು ಬಲಕೆ ವಜ್ರದ ಹರಳು
ತೀಡಿ ಕಾಡಿಗೆ ಹಚ್ಚಿ ತಿದ್ದಿ ಕುಂಕುಮವ
ಹಣೆ ಮ್ಯಾಲೆ ಹಚ್ಚಿ ಜೋಳದಕುಡಿಯಂತೆ || 92 ||

ಪಿಲ್ಯ ಕಾಲುಂಗುರ ಲುಲ್ಲು ಪೈಜಣ ರುಳಿ
ಘಲ್ಲು ಘಲ್ಲೆಂತ ಹೆಜ್ಜೆನಿಡುತ
ಗೆಲ್ಲು ಮಿಂಚುಗಳಂತೆ ಥಳಥಳಿಸುತ ಬೀದಿಯಲ್ಲಿ
ಬಂದಳು ಗಜಗಮನೆ || 93 ||

ಬೆಳ್ಳನೆ ಬೆಳ್ಳಿಯ ಮಿಳ್ಳೆ ತನ್ನ ಉಂಗುರ
ಬೆರಳಿನಿಂದ ಹಿಡಿದು ಬೀಸುತಲಿ
ತೆಳ್ಳನೆ ಪಾದ ಪುತ್ಥಳಿಯಂತೆ ಹೊಳೆಯುತ
ಚಿನ್ನ ಬಳ್ಳಿಯಂದದಿ ಬಳುಕುತಲಿ || 94 ||

ರಾಜಾಧಿರಾಜರೆಲ್ಲರು ನಿಂತು ನೋಡುತ
ಲಾಜಾವರದ ಗೊಂಬೆಯಂತೆ
ಭೋಜನಕೆತ್ತ ಪೋಗುವಳೋ ನೋಡುವಣೆಂದು
ಬಹು ಜನರು ಹಿಂದೆ ನಡೆದರು || 95 ||

ದಾವಲೋಕದಿಂದ ಇಳಿದಿಲ್ಲಿ ಬಂದಳು
ದಾರ ಸತಿಯೋ ದಾರ ಸುತಳೋ
ಮೋರೆ ನೋಡಲು ಮೂರ್ಛೆ ಬರುವುದು ಒಯ್ಯಾರಿ
ಮುಂಗಾರು ಮಿಂಚುಗಳಂತೆ ತೋರುವಳು || 96 ||

ಇಂದ್ರನ ಶಚಿಯೋ ಚಂದ್ರಮನ ರೋಹಿಣಿಯೋ
ಸುಂದರ ಸೂರ್ಯನರಸಿ ಸಂಜ್ಞೆಯೋ
ಗಾಂಧರ್ವರರಸಿಯೋ ಗಗನದಿಂದ ಇಳಿದಂಥ
ಗಂಗಾ ಶ್ಯಾಮಲ ಸೀತಾಂಗನೆಯೋ || 97 ||

ರತಿಯೋ ರೇವತಿಯೋ ಅರುಂಧತಿಯೋ ಪಾರ್ವತಿಯೋ ಭಾರತಿ
ಭಾಗ್ಯವಂತೆ ಸರಸ್ವತಿಯೋ
ಪತಿಗಳು ಐವರು ಸತ್ಯ ಪಾಂಡವರರ ಅರಸಿ
ದ್ರೌಪದಿ ಬಂದಳಿಲ್ಲಿಗೆ ಎಂಬುವರು || 98 ||

ಸತ್ಯಭಾಮೋ ರುಕ್ಮಣೀ ಜಾಂಬವಂತೀ ಆಷ್ಟಮ
ಸ್ತ್ರೀಯರೊಳಿಗಿದಾರೋ ಇವತ್ತು
ಸಂಪತ್ತು ಶುಕ್ಕುರುವಾರ ಸಾಕ್ಷಾತ
ಲಕ್ಷ್ಮಿಯೇ ಬಂದಳು ಎಂಬುವರು || 99 ||

ಹಸ್ತವ ಮುಗಿವರು ಸಾಷ್ಟಾಂಗಕ್ಕೆರಗೋರು
ಇತ್ತ ಬನ್ನಿ ಎಂದು ಕರೆವರು
ಶ್ರೇಷ್ಠ ವೈಕುಂಠ ಮೋಕ್ಷಪುರ ಮಾಲಕ್ಷ್ಮೀ
ಬಿಟ್ಟಿಲ್ಲೆ ಬಂದಳೆಂಬುವರು || 100 ||

ಮುಡಿಬಾಗಿ ನಡೆಯುತ ಮುಡಿದ ಹೂವು ಉದುರುತಾ
ಮುಗುಳ್ನಗೆಯಿಂದ ತಾ ನಗುತಾ
ಎಡಬಲದಲಿ ಓರೆನೋಟವ ನೋಡುತಾ
ನಡೆದಳು ಬಡವರ ಮನೆಗೆ || 101 ||

ಸಿರಿ ಬಂದು ತಾ ಕಣ್ಣ ತೆರೆದು ನೋಡುತಲಿರೆ
ಅರಮನೆ ಆಯಿತು ಆ ಕ್ಷಣದಿ
ಸುರಗಿ ಮಲ್ಲಿಗೆ ಶ್ಯಾವಂತಿಗೆ ನಾನಾ ಫಲಗಳಿದ್ದ
ವನವಾಯಿತು ಆ ಮನೆ ಸುತ್ತ || 102 ||

ಗಚ್ಚಿನಂಗಳ ವೃಂದಾವನ ಕಟ್ಟೆ ಕಾರಂಜಿ
ಹಚ್ಚನೆ ಗಿಳಿ ಹಂಸ ಗರುಡ ಪಕ್ಷಿ
ನವಿಲು ಪಾರಿವಾಳ ಪಾಂಚಾಲಿ ವೃಕ್ಷ ಅಶ್ವತ್ಥಗಿಡಗಳು || 103 ||

ಪಚ್ಚದಂತೆ ಹೊಳೆವೋ ಶ್ರೀ ತುಳಸಿದೇವಿಯರಲ್ಲಿ
ಅಚ್ಚ ವಜ್ರದ ಗೊಂಬೆಯಂತೆ
ಲಕ್ಷ್ಮಿ ತಾ ನಲಿನಲಿಯುತಲಿ ರಚಿತವಾದ
ಕುರ್ಚಿಯಲಿ ಬಂದು ಕೂಡುವಳು || 104 ||

ಬಡವನ ಮಡದಿಗೆ ಒಡವೆ ವಸ್ತ್ರವಾದವು
ಹರಡಿ ಕಂಕಣವು ಕೈಯಲ್ಲಿ
ಮಡಿಸೀರೆ ಉಟ್ಟಿದ್ದು ಹೋಗಿ ಮಡಿಪೀತಾಂಬರವಾಯ್ತು
ಅಡಿಗೆರಗಿ ಎದುರುಗೊಂಬುವರು || 105 ||

ಗಂಧ ಕುಂಕುಮ ಅರಿಷಿಣ ದಿವ್ಯ ಬುಕ್ಕಿಟ್ಟು
ತಂದು ಹಚ್ಚಿ ಕಾಲ ಜಾವಡಿಯ
ದುಂಡು ಮಲ್ಲಿಗೆ ಪಾರಿಜಾತ ಸಂಪಿಗೆ ಮಾಲೆ
ದಂಡೆ ಮುಡಿಸಿ ಜಡೆಮುಡಿಗೆ || 106 ||

ಕದಳಿ ಫಲಗಳು ಕೊಬ್ಬರಿಬಟ್ಟಲೊಳಗೆ ಹುರಿಗಡಲೆ
ಹಾಕಿ ಉಡಿಯ ತುಂಬುವರು
ಹಿಡಿದು ಕುಂದಣದ ಹರಿವಾಣದೊಳು ಹಾಡಿ
ಪಾಡುತ ಮಾಡಿ ಮುತ್ತಿನಾರತಿಯ || 107 ||

ಇಂದಿರಾದೇವಿ ಆನಂದದಿ ಕುಳಿತಿರೆ
ಇಂದ್ರಾದಿ ಸುರರು ನೋಡುತಲಿ
ಮಂದಾರ ಮಲ್ಲಿಗೆ ಮಳೆಯ ಕರೆದರಾಗ
ದುಂದುಭಿ ಭೇರಿ ಬಡಿದವು || 108 ||

ಎಡಬಲದಲ್ಲಿ ಚಾಮರವನ್ನು ಬೀಸೋರು
ಹಿಡಿದು ಹಿಲಾಲು ನೋಡುವರು
ಬಿಡಿಮಲ್ಲಿಗೆ ತಂದು ನಡೆಮುಡಿ ಹಾಸೋರು
ಸಡಗರದಿಂದ ಎದ್ದಳಾಗ || 109 ||

ಲಕ್ಕುಮಿದೇವಿ ತಾ ಗಕ್ಕನೆ ಬಂದಳು
ಹೊಕ್ಕಳು ದೇವರ ಮನೆಯ
ಚೊಕ್ಕ ಚಿನ್ನದ ಕೊಡವಾಗಿ ತಾ ತೂಗೋ
ಮಾಣಿಕ್ಯ ಮಂಚದಲು ಕೂಡುವಳು || 110 ||

ರನ್ನ ಮಾಣಿಕ್ಯ ರತ್ನ ಹೊನ್ನಹಣವು ಚೊಕ್ಕ
ಚಿನ್ನದ ಮೊಹರ ವರಾಹಗಳು
ಬಣ್ಣದ ಹವಳ ಮುತ್ತು ಭಾರಿ ಬಂಗಾರದಂದಿಗೆಯ
ಬಿಂದಿಗೆ ನೋಡುತಿಹರು || 111 ||

ಶುಕ್ಕುರುವಾರ ಶುಭಕಾಲ ಇವರಿಗೆ
ಸಿಕ್ಕಳು ಸಿಂಧುನಂದನೆಯು
ಬೊಕ್ಕಸದ ಭಾಗ್ಯ ಭಂಡಾರದ ಜಯಲಕ್ಷ್ಮೀ
ದಕ್ಕಿದಳು ಇವರಿಗೆ ಎಂಬುವರು || 112 ||

ಕರ್ಪೂರದಾರತಿ ಮಾಡಿ ಕಾಯಿ ಒಡೆದು
ಬುಕ್ಕಿಟ್ಟು ಕುಂಕುಮ ಹಚ್ಚುವರು
ಪಟ್ಟಣದ ಜನರು ಪತ್ತಲ ಸೀರಿ ಕುಪ್ಪುಸ
ಲಕ್ಷ್ಮಿಗೆ ಉಡುಗೊರೆಯ ಕೊಡುವರು || 113 ||

ನಾಲ್ಕುವಾರದ ಎಲೆ ತೆಗೆದು ನೋಡುತಲಿರೆ
ಹಾಕಿದ ಅನ್ನವು ಆಣಿಮುತ್ತು
ಶಾಕ ಪಾಕವು ಪಲ್ಯ ಪರಮಾನ್ನ ಭಕ್ಷ್ಯ
ಬಂಗಾರ ರಜತ ಬಾಳೆಯೆಲೆಯು || 114 ||

ಬಂದು ನೋಡುತ ನಾಲ್ಕು ಮಂದಿ ಸೊಸೆಯರು
ಹಂಚಿಕೊಂಡರು ಆಗ ಒಂದೊಂದು ಎಲೆಗಳ
ಹಿಂದೆ ಮಾಡಿದ ಪುಣ್ಯ ಒಂದು ಒದಗಿತು ನಮಗೆಂದು
ಸಂತೋಷ ಪಡುವರು || 115 ||

ಬಂದ ಮುತ್ತೈದೆ ಬ್ರಾಹ್ಮಣರೊಡಗೂಡಿ ಕೊಂಡುಂಡು
ವೀಳ್ಯವನೆ ತಕ್ಕೊಂಡು
ಮಂದಗಮನೆ ಲಕ್ಷ್ಮೀ ಮಹಿಮೆ ಕೊಂಡಾಡುತ
ಆನಂದವಾಗಿ ಇರುತ್ತಿದರವರು || 116 ||

ಮುದದಿಂದ ಮೂರ್ಜಗದ ಒಡೆಯ ನಾರಾಯಣನ
ಎದೆಯಲ್ಲಿ ಇರವೋ ಲಕ್ಷ್ಮೀ ನಮ್ಮ
ಸದನಕೆ ಬಂದು ಸಂಪತ್ತು ಶುಕ್ಕುರುವಾರ
ಸಮ ದೃಷ್ಟಿಯಿಂದ ನೋಡುವಳು || 117 ||

ಕಿವುಡಗೆ ಕಿವಿ ಕುರುಡಗೆ ಕಣ್ಣು ಬರುವುದು
ಬರಡು ಆಕಳು ಹೈನವಾಗುವುದು
ಹಡೆಯದ ಬಂಜೆ ಹೊಟ್ಟೆ ಮಕ್ಕಳಾಗೋರು
ಪಡೆವರೋ ಇಷ್ಟಫಲಗಳ || 118 ||

ದನಕರು ತಳಿಯಾಗಿ ಧನಧಾನ್ಯ ಬೆಳೆಯಾಗಿ
ಸದಾಕಾಲ ಶುಭಕಾರ್ಯವಾಗಿ
ಬಳೆ ಕುಂಕುಮ ಅರಿಷಿಣ ಮಾಂಗಲ್ಯ ಮುತ್ತೈದೆತನವ
ಕೊಟ್ಟು ವರವ ನೀಡುವಳು || 119 ||

ಬಡವರ ಮನೆಗೆ ನಡೆದು ಬಂದು ಭಾಗ್ಯದ
ಕೊಡವಾಗಿ ಕೂತಂತ ಕಥೆಯು
ಧೃಢಭಕ್ತಿಯಿಂದ ಹೇಳಿ ಕೇಳಿದ ಜನರಿಗೆ
ಕೊಡುವಳು ಸಕಲ ಸಂಪತ್ತು || 120 ||

ಸಾಮಜವರದ ಸುಧಾಮನ ಸಖನಾದ
ಸ್ವಾಮಿ ಶ್ರೀಹರಿ ಮೋಹದ ಅರಸಿ
ಶ್ರೀಮಹಾಲಕ್ಷ್ಮೀ ಪೂಜೆಯ ಮಾಡಿದವರಿಗೆ
ಭೀಮೇಶಕೃಷ್ಣ ತಾ ಒಲಿವ || 121 ||

ಶ್ರಾವಣ ಶುಕ್ರವಾರ ಹಾಡು

Frequently Asked Questions About Shravana Shukravara Hadu

ಶ್ರಾವಣ ಶುಕ್ರವಾರದ ಹಾಡಿನ ಇನ್ನೊಂದು ಹೆಸರು ಏನು?

ಶ್ರಾವಣ ಶುಕ್ರವಾರದ ಹಾಡಿನ ಇನ್ನೊಂದು ಹೆಸರು ‘ಸಂಪತ್ತು ಶುಕ್ರವಾರದ ಹಾಡು’

ಶ್ರಾವಣ ಶುಕ್ರವಾರದ ಹಾಡನ್ನು ಯಾರು ರಚಿಸಿದ್ದಾರೆ ?

ಹರಪನಹಳ್ಳಿ ಭೀಮವ್ವ ಶ್ರಾವಣ ಶುಕ್ರವಾರದ ಹಾಡನ್ನುರಚಿಸಿದ್ದಾರೆ.

ಶ್ರಾವಣ ಶುಕ್ರವಾರದ ಹಾಡನ್ನು ಯಾರು, ಯಾವಾಗ ಹಾಡಬೇಕು?

ಶ್ರಾವಣ ಮಾಸದಲ್ಲಿ ಬರುವ ಶುಕ್ರವಾರಗಳಂದು ಸುಮಂಗಲಿಯರು ಈ ಹಾಡನ್ನು ಹೇಳುವದು ಮನೆ ಮನೆಯಲ್ಲಿಯ ಸಂಪ್ರದಾಯ. ಸಾಯಂಕಾಲ ಬಹಳ ಪ್ರಶಸ್ತವಾದ ಸಮಯ.

Leave a Comment

Your email address will not be published. Required fields are marked *